ಸುದ್ದಿ

ಅಪರಾಧ ಪ್ರಕರಣ: ಸಂಬಂಧಿಯಾಗಿರುವ ಪ್ರತ್ಯಕ್ಷದರ್ಶಿಯ ಸಾಕ್ಷ್ಯವು ನಂಬಲರ್ಹವಾಗಿದ್ದರೆ ಅದನ್ನು ಪರಿಗಣಿಸಬಹುದು- ಹೈಕೋರ್ಟ್

Share It

ಬೆಂಗಳೂರು: ಅಪರಾಧ ಪ್ರಕರಣದಲ್ಲಿ ಒಬ್ಬ ಪ್ರತ್ಯಕ್ಷ ಸಾಕ್ಷಿ. ಸತ್ತವರ ಕುಟುಂಬದ ಸದಸ್ಯನಾಗಿರುವ ಮಾತ್ರಕ್ಕೆ ಅಂತಹ ಸಾಕ್ಷಿಯ ಸಾಕ್ಷ್ಯವನ್ನು ತಿರಸ್ಕರಿಸಲಾಗುವುದಿಲ್ಲ. ಸತ್ತವರ ನಿಕಟ ಸಂಬಂಧಿಯಾಗಿರುವ ಪ್ರತ್ಯಕ್ಷದರ್ಶಿಯ ಸಾಕ್ಷ್ಯವು ಸಮಂಜಸ ಮತ್ತು ವಿಶ್ವಾಸಾರ್ಹವಾಗಿದ್ದರೆ, ಅದನ್ನು ಪರಿಗಣಿಸಬಹುದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.ಕೊಲೆ ಪ್ರಕರಣದಲ್ಲಿ ಮೃತನ ತಂದೆ ಹಾಗೂ ಸಹೋದರನ ಸಾಕ್ಷ್ಯ. ಆಧರಿಸಿ ಹೆಚ್ಚುವರಿ ಸೆಷನ್ಸ್ ಕೋರ್ಟ್ ಇಬ್ಬರಿಗೆ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಎತ್ತಿಹಿಡಿದಿದೆ.

ವಿಜಯಪುರದ ಅಮಸಿದ್ದ ಬರಕಡೆ ಕೊಲೆ ಪ್ರಕರಣದಲ್ಲಿ ತಮ್ಮನ್ನು ದೋಷಿಯಾಗಿ ತೀರ್ಮಾನಿಸಿ ಜೀವಾವಧಿ ಶಿಕ್ಷೆ ವಿಧಿಸಿದ ವಿಚಾರಣಾ ನ್ಯಾಯಾಲಯದ ಆದೇಶ ರದ್ದು ಕೋರಿ ಕಾಮಣ್ಣ (42) ಹಾಗೂ ಸೋಮಲಿಂಗ (36) ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿ ವಜಾಗೊಳಿಸಿರುವ ನ್ಯಾಯಮೂರ್ತಿ ಎಸ್. ಸುನೀಲ್ ದತ್ ಯಾದವ್ ಮತ್ತು ನ್ಯಾಯಮೂರ್ತಿ ರಾಮಚಂದ್ರ ಡಿ.ಹುದ್ದಾರ್ ಅವರ ವಿಭಾಗೀಯ ಪೀಠ ಈ ಆದೇಶ ಮಾಡಿದೆ.

ಆಮರಸಿದ್ದ ಬರಕಡೆ ಕೊಲೆ ನಡೆದ ಜಮೀನಿನಲ್ಲಿಯೇ ಪ್ರತ್ಯಕ್ಷ ದರ್ಶಿಗಳಾಗಿರುವ ಮೃತನ ತಂದೆ ಶಂಕರಪ್ಪ ಮತ್ತು ಸಹೋದರ ಫಾರ್ಮ್ ಹೌಸ್ ಕಟ್ಟಿಕೊಂಡು ನೆಲೆಸಿದ್ದಾರೆ. ಆರೋಪಿಗಳು ಜಮೀನಿಗೆ ನುಗ್ಗಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಕಿರುಚಾಟ ಕೇಳಿ ಪ್ರತ್ಯಕ್ಷದರ್ಶಿಗಳು ಘಟನಾ ಸ್ಥಳಕ್ಕೆ ಬಂದಿದ್ದರು. ಅಲ್ಲಿ ಅಮರಸಿದ್ದ ಮೃತದೇಹ ಬಿದ್ದಿರುವುದು ಕಂಡಿದ್ದಾರೆ, ಆರೋಪಿಗಳಿಂದ ಕೊಲೆಗೆ ಬಳಸಿದ ಆಯುಧವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನಾ ಸ್ಥಳದಲ್ಲಿ ಆರೋಪಿಗಳು ಇದ್ದದ್ದನ್ನು ಸಾಕ್ಷ್ಯಾಧಾರಗಳಿಂದ ಪ್ರಾಸಿಕ್ಯೂಷನ್ ಸಾಬೀತುಪಡಿಸಿದೆ ಎಂದು
ತೀರ್ಮಾನಿಸಿದೆ.

ಅಲ್ಲದೆ, ದೂರುದಾರನಾಗಿರುವ ಮೃತನ ತಂದೆ ಮತ್ತು ಆತನ ಪುತ್ರ ಪ್ರಕರಣದಲ್ಲಿ ಪ್ರತ್ಯಕ್ಷದರ್ಶಿಗಳಾಗಿದ್ದಾರೆ. ಅವರನ್ನು ಆಸಕ್ತ ಸಾಕ್ಷ್ಯಗಳೆಂದು  ಪರಿಗಣಿಸಲಾಗಿದೆ. ಒಬ್ಬ ಪ್ರತ್ಯಕ್ಷ ಸಾಕ್ಷಿಯು ಸತ್ತವರ ಕುಟುಂಬದ ಸದಸ್ಯನಾಗಿರುವುದರಿಂದ, ಅಂತಹ ಸಾಕ್ಷಿಯ ಸಾಕ್ಷ್ಯವನ್ನು ತಿರಸ್ಕರಿಸಲಾಗದು ಎಂದು ಸುಪ್ರೀಂಕೋರ್ಟ್ ಪ್ರಕರಣವೊಂದರಲ್ಲಿ ಹೇಳಿರುವ ತೀರ್ಪು ಈ ಪ್ರಕರಣಕ್ಕೆ ಸ್ಪಷ್ಟವಾಗಿ ಅನ್ವಯಿಸಲಿದೆ. ಆದ್ದರಿಂದ ಆರೋಪಿಗಳಿಗೆ ಶಿಕ್ಷೆ ವಿಧಿಸಿದ ವಿಚಾರಣಾ ನ್ಯಾಯಾಲಯ ಆದೇಶ ಸೂಕ್ತವಾಗಿದೆ ಎಂದು ಹೈಕೋರ್ಟ್ ಆದೇಶಿಸಿದೆ.

ಪ್ರಕರಣದ ವಿವರ: ವಿಜಯಪುರದ ಕನ್ನೂರು ಗ್ರಾಮದಲ್ಲಿ 5 ಎಕರೆ ಭೂಮಿಯನ್ನು ಮಲ್ಲಪ್ಪ ಬರಕಡೆ ಎಂಬುವವರು ಕಾಮಣ್ಣನ ಸಂಬಂಧಿ ರುದ್ರಪ್ಪ ಅವರಿಂದ ಖರೀದಿಸಿದ್ದರು. ಈ ಜಮೀನನ್ನು ಹಿಂದಿರುಗಿಸಬೇಕೆಂಬ ಕಾಮಣ್ಣನ ಒತ್ತಾಯಕ್ಕೆ ಮಲ್ಲಪ್ಪ ನಿರಾಕರಿಸಿದ್ದರು. ಮಲ್ಲಪ್ಪನ ಬೆಂಬಲಕ್ಕೆ ಸಹೋದರ ಅಮಸಿದ್ದ ಬರಕಡೆ ನಿಂತಿದ್ದರು. ಇದರಿಂದ ಕೋಪಗೊಂಡ ಕಾಮಣ್ಣ ಮತ್ತು ಇತರೆ ಆರೋಪಿಗಳು 2013ರ ಸೆ.19ರಂದು ಸಂಜೆ ತನ್ನ ಜಮೀನಿನಲ್ಲಿದ್ದ ಆಮರಸಿದ್ದ ಬರಕಡೆಯನ್ನು ಕೊಲೆಗೈದಿದ್ದರು. ಮೃತನ ತಂದೆ ಶಂಕರಪ್ಪ ನೀಡಿದ ದೂರು ಆಧರಿಸಿ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆ ಪೊಲೀಸರು ತನಿಖೆ ನಡೆಸಿ ಕೊಲೆ ಅಪರಾಧದಡಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ್ದ ವಿಜಯಪುರ 5ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ, ಕಾಮಣ್ಣ ಹಾಗೂ ಸೋಮಲಿಂಗ ಸೇರಿ ನಾಲ್ವರಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ 30 ಸಾವಿರ ದಂಡ ವಿಧಿಸಿ ಆದೇಶಿಸಿದೆ.


Share It

You cannot copy content of this page