ಬೆಂಗಳೂರು: ಪೊಲೀಸರು ಕೆಲ ರಾಜಕೀಯ ಮುಖಂಡರೊಂದಿಗೆ ಸೇರಿ ತನಗೆ ಕಿರುಕುಳ ನೀಡುತ್ತಿದ್ದಾರೆ, ನ್ಯಾಯಾಲಯ ಬಿಟ್ಟು ಹೋಗುವುದಿಲ್ಲ, ಹೋದರೆ ರಿವಾಲ್ವರ್ ತೋರಿಸಿ ಎನ್ಕೌಂಟರ್ ಮಾಡುವುದಾಗಿ ಬೆದರಿಸುತ್ತಾರೆ, ನನ್ನ ಮೇಲೆ ರೌಡಿಶೀಟ್ ತೆರೆಯುತ್ತಾರೆ. ದಯವಿಟ್ಟು ನನ್ನನ್ನು ಕಾಪಾಡಿ ಎಂಬುದಾಗಿ ನ್ಯಾಯಾಲಯದಲ್ಲಿ ಗೋಗರೆದಿದ್ದ ಎಂಜಿನಿಯರ್ ವಿರುದ್ಧ ಬಲವಂತದ ಕ್ರಮ ಜರುಗಿಸದಂತೆ ಹೈಕೋರ್ಟ್ ಪೊಲೀಸರಿಗೆ ನಿರ್ದೇಶಿಸಿದೆ.
ಮಹಿಳೆಗೆ ಘನತೆಗೆ ಧಕ್ಕೆ ತಂದ ಆರೋಪ ಹಾಗೂ ಎನ್.ಡಿ.ಪಿ.ಎಸ್ ಕಾಯ್ಗೆ ಅಡಿ ತಮ್ಮ ವಿರುದ್ಧ ದಾಖಲಾಗಿರುವ 3 ಎಫ್ಆಆರ್ಗಳನ್ನು ರದ್ದುಪಡಿಸುವಂತೆ ಕೋರಿ ಕೆಪಿಸಿಟಿಎಲ್ನ ಸೊರಬ ಕಾರ್ಯಕಾರಿ ಸಹಾಯಕ ಎಂಜಿನಿಯರ್ ಎಂ.ಜಿ.ಶಾಂತಕುಮಾರಸ್ವಾಮಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ಈ ಆದೇಶ ಮಾಡಿದೆ.
ವಿಚಾರಣೆ ವೇಳೆ ಸರ್ಕಾರದ ಪರ ಹಾಜರಿದ್ದ ಎಸ್ಪಿಪಿ ಬಿ.ಎನ್. ಜಗದೀಶ್ ಅವರು ಪೀಠಕ್ಕೆ ಮಾಹಿತಿ ನೀಡಿ, ಅರ್ಜಿದಾರರ ವಿರುದ್ಧ ಯುವತಿಯೊಬ್ಬರು ದೂರು ದಾಖಲಿಸಿದ್ದಾರೆ. ವಾಸ್ತವವಾಗಿ ಅರ್ಜಿದಾರ ಮೊದಲಿಗೆ ಬೇರೊಂದು ಮಹಿಳೆಯನ್ನು ಮದುವೆಯಾಗಿದ್ದರು. ದೂರುದಾರ ಯುವತಿ ಜೊತೆಗೆ ಎರಡನೇ ಮದುವೆಯಾಗಲು ಅರ್ಜಿದಾರ ಮುಂದಾಗಿದ್ದರು. ಮೊದಲ ಮದುವೆಯ ವಿಷಯ ತಿಳಿದ ನಂತರ ಮದುವೆ ಪ್ರಸ್ತಾಪ ಕಡಿದುಕೊಂಡಿದ್ದರು. ಈ ಕೋಪಕ್ಕೆ ಅರ್ಜಿದಾರ ದೂರು ನೀಡಿದ್ದ ಯುವತಿ ಗ್ರಾಮದಲ್ಲಿ ಆಕೆಯ ಗೌರವಕ್ಕೆ ಧಕ್ಕೆಯಾಗುವಂತೆ ದೊಡ್ಡ ಬ್ಯಾನರ್ ಹಾಕಿಸಿದ್ದಾರೆ. ಇಂತಹ ಕೃತ್ಯಗಳನ್ನು ನಡೆಸದಂತೆ ಅರ್ಜಿದಾರರಿಗೆ ಸೂಚಿಸಬೇಕು ಎಂದು ನ್ಯಾಯಪೀಠವನ್ನು ಕೋರಿದರು.
ಇದಕ್ಕೆ ಅಚ್ಚರಿ ವ್ಯಕ್ತಪಡಿಸಿದ ನ್ಯಾಯಪೀಠ, ಏನ್ರಿ ಇದೆಲ್ಲಾ? ಹೀಗೆಲ್ಲಾ ಏಕೆ? ಎಂದು ಅರ್ಜಿದಾರ ಪರ ವಕೀಲರನ್ನು ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ಅರ್ಜಿದಾರರ ಪರ ವಕೀಲರು, ಶಾಂತಕುಮಾರಸ್ವಾಮಿ ಬ್ಯಾನರ್ ಹಾಕಿಲ್ಲ. ದೂರು ನೀಡಿರುವ ಯುವತಿ ಮತ್ತು ಅರ್ಜಿದಾರರ ನಡುವಿನ ಮದುವೆ ಸಂಬಂಧ ಮುರಿದು ಬಿದ್ದ ನಂತರ ಆಕೆಯ ಕುಟುಂಬದವರು ಅರ್ಜಿದಾರನ ಮೇಲೆ ಹಲ್ಲೆ ನಡೆಸಿದ್ದಾರೆ. ಆತ ದೂರು ದಾಖಲಿಸಿದ್ದಕ್ಕೆ ಯುವತಿ ಕುಟುಂಬದವರು ಪ್ರತಿ ದೂರು ದಾಖಲಿಸಿದ್ದಾರೆ. ಶಾಂತಕುಮಾರಸ್ವಾಮಿ ದಾಖಲಿಸಿದ್ದ ದೂರಿನ ಸಂಬಂಧ ದೋಷಾರೋಪ ಪಟ್ಟಿ ಸಲ್ಲಿಸಿಲ್ಲ ಎಂದು ಆಕ್ಷೇಪಿಸಿದರು.
ಜತೆಗೆ, ತನಿಖಾಧಿಕಾರಿಯು ತನ್ನ ಕಸ್ಟಡಿಯಿಂದ ಬಿಡುಗಡೆ ಮಾಡಲು ಅರ್ಜಿದಾರನ ಬಳಿ ಹಣ ಕೇಳಿದ್ದರು. ಆ ಕುರಿತು ಎಂಜಿನಿಯರ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಹೀಗಾಗಿ ಒಂದಾದ ಮೇಲೆ ಒಂದು ಪ್ರಕರಣ ಅರ್ಜಿದಾರನ ಮೇಲೆ ದಾಖಲಿಸುತ್ತಿದ್ದಾರೆ ಎಂದು ಆರೋಪಿಸಿದರು.
ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್, ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಅರ್ಜಿದಾರ ಹಾಗೂ ಸರ್ಕಾರದ ಪರ ವಕೀಲರಿಗೆ ಸೂಚಿಸಿತು. ಅಲ್ಲದೇ, ಅರ್ಜಿದಾರರ ವಿರುದ್ಧದ ಯಾವುದೇ ಪ್ರಕರಣ ಸಂಬಂಧ ಪೊಲೀಸರು ಬಲವಂತದ ಕ್ರಮ ಜರುಗಿಸಬಾರದು ಎಂದು ಸೂಚಿಸಿ ವಿಚಾರಣೆ ಮುಂದೂಡಿತು.