ಸುದ್ದಿ

ಖಾಯಂಮಾತಿ ಸಾಧ್ಯವಿಲ್ಲ ಎಂಬ ಸರ್ಕಾರದ ಹಿಂಬರಹ ರದ್ದು; 10 ವರ್ಷ ಸೇವೆ ಸಲ್ಲಿಸಿದವರ ಖಾಯಂಮಾತಿಗೆ ಆದೇಶಿಸಿದ ಹೈಕೋರ್ಟ್

Share It

ಬೆಂಗಳೂರು: ಹತ್ತು ವರ್ಷಕ್ಕೂ ಅಧಿಕ ಸಮಯದಿಂದ ಕೆಲಸ ಮಾಡುತ್ತಿದ್ದ ನೌಕರರನ್ನು ಖಾಯಂಗೊಳಿಸಿಲು ಸಾಧ್ಯವಿಲ್ಲ ಎಂದು ಹಿಂಬರಹ ನೀಡಿದ್ದ ಸರ್ಕಾರದ ಹಿಂಬರಹವನ್ನು ರದ್ದುಪಡಿಸಿರುವ ಹೈಕೋರ್ಟ್, ಈ ನೌಕರರು ಖಾಯಂಮ್ಮಾತಿಗೆ ಅರ್ಹರಾಗಿದ್ದು, ಮೂರು ತಿಂಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಆದೇಶಿಸಿದೆ.

ಸೇವೆ ಖಾಯಂಗೊಳಿಸಲು ನಿರಾಕರಿಸಿ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ನೀಡಿದ್ದ ಹಿಂಬರವನ್ನು ಪ್ರಶ್ನಿಸಿ ಮೈಸೂರಿನ ಶಾಂತಲಕ್ಷ್ಮಿ ಹಾಗೂ ಇತರರು ಪ್ರತ್ಯೇಕವಾಗಿ ಸಲ್ಲಿಸಿದ್ದ ರಿಟ್ ಅರ್ಜಿಗಳನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಂ ಶ್ಯಾಮ್ ಪ್ರಸಾದ್ ಅವರಿದ್ದ ಪೀಠ ಈ ಮಹತ್ವದ ತೀರ್ಪು ನೀಡಿದೆ.

ಹೈಕೋರ್ಟ್ ತನ್ನ ತೀರ್ಪಿನಲ್ಲಿ, ಒಂದೇ ಬಗೆಯ ಉದ್ಯೋಗ ಮಾಡುವವರನ್ನು ಭಿನ್ನ ರೀತಿಯಲ್ಲಿ ನೋಡಲಾಗದು. ಅರ್ಜಿದಾರರು 10 ವರ್ಷಗಳಿಗೂ ಅಧಿಕ ಕಾಲ ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಯಲ್ಲಿ ದಿನಗೂಲಿ ನೌಕರರಾಗಿ ಸೇವೆ ಸಲ್ಲಿಸಿದ್ದಾರೆ. ಅವರನ್ನು ಹಂಗಾಮಿ ನೌಕರರಾಗಿಯೇ ಮುಂದುವರಿಸಲಾಗದು. ಅವರಿಗೆ ಅರ್ಹ ವೇತನ/ ಭತ್ಯೆಗಳನ್ನು ನೀಡಬೇಕಾಗುತ್ತದೆ. ಹಾಗಾಗಿ, ಉಮಾದೇವಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿನ ಅನುಸಾರ ಇವರು ಸೇವೆ ಕಾಯಂಗೆ ಅರ್ಹರು” ಎಂದು ವಿವರಿಸಿದೆ

ಅಲ್ಲದೇ, ಈ ಪ್ರಕರಣದಲ್ಲಿ 2002/2005ರ ಯೋಜನೆಗಳಂತೆ ಅರ್ಜಿದಾರರು ಸೇವೆ ಕಾಯಮ್ಮಾತಿಗೆ ಅರ್ಹರಾಗಿದ್ದಾರೆ. ಅವರ ಸೇವೆ ಕಾಯಂಗೊಂಡಿದ್ದು, ಅವರ ಕೆಲಸದ ಸ್ವರೂಪ ಮತ್ತು ಸೇವೆ ಮುಂದುವರಿಕೆ ಬಗ್ಗೆ ನಿರ್ಧರಿಸಬೇಕಿದೆ. ಅರ್ಜಿದಾರರನ್ನು ಇತರೆ ಸಿಬ್ಬಂದಿಯಂತೆ ಸಮಾನವಾಗಿ ಕಾಣಬೇಕಿದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಅರ್ಜಿದಾರರು ಸೇವೆ ಕಾಯಂಗೆ ಅರ್ಹರಲ್ಲ ಎಂದು 2010ರ ಜೂನ್ 14 ಮತ್ತು 2012ರ ಜೂನ್ 15ರಂದು ನೀಡಿದ್ದ ಹಿಂಬರಹಗಳನ್ನು ರದ್ದುಗೊಳಿಸಿದೆ.

ಖಾಯಂಗೊಳಿಸಲು ನಿರಾಕರಿಸಿದ್ದ ಇಲಾಖೆ: ದಿನಗೂಲಿ ನೌಕರರಾಗಿ ಕೆಲಸ ಮಾಡುತ್ತಿದ್ದ ಅರ್ಜಿದಾರರನ್ನು ಖಾಯಂಗೊಳಿಸಲು ನಿರಾಕರಿಸಿ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಹಿಂಬರ ನೀಡಿದ್ದವು. ಈ ಕ್ರಮವನ್ನು ಸಮರ್ಥಿಸಿಕೊಂಡಿದ್ದ ಸರ್ಕಾರ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಅರ್ಜಿದಾರರನ್ನು ಮಂಜೂರಾದ ಹುದ್ದೆಗಳಿಗೆ ನೇಮಕ ಮಾಡಿಕೊಂಡಿರಲಿಲ್ಲ. ಬದಲಿಗೆ ಅವರನ್ನು ಮಂಜೂರಾಗದ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗಿತ್ತು. ನ್ಯಾಯಾಲಯಗಳ ಆದೇಶದಿಂದಾಗಿ ಅರ್ಜಿದಾರರನ್ನು 10 ವರ್ಷಕ್ಕೂ ಅಧಿಕ ಸಮಯದಿಂದ ದಿನಗೂಲಿ ಸೇವೆಯಲ್ಲಿ ಮುಂದುವರಿಸಲಾಗಿದೆ. ಹಾಗಾಗಿ ಅವರು ಸೇವೆ ಕಾಯಂಗೆ ಅನರ್ಹರು ಎಂದು ವಾದಿಸಿತ್ತು.
W.P No. 40204/2012

ಮೂಲ- LAW TIME


Share It

You cannot copy content of this page